ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾದ ಬಿಜ್ಜನ ಹಳ್ಳಿ ಎಂಬ ಹೆಸರ ಊರು ರಾಜ ಬಿಜ್ಜಳನ ನೆನಪಿಗಾಗಿ ಬಿಜಾಪುರ ಎಂಬ ಹೆಸರಿನಲ್ಲಿದ್ದ ನಗರ ಈಗ ವಿಜಯಪುರ ಎಂದು ಕರೆಯಲಾಗುತ್ತದೆ. ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಒಳಗಾಗಿ ಬೀದರಿನ ಬಹುಮನಿ ಸುಲ್ತಾನರು, ಆದಿಲ್ ಶಾಹಿ ಸುಲ್ತಾನರು ನಿಜಾಮರ ಆಳ್ವಿಕೆಗೆ ಒಳಪಟ್ಟು ನಂತರ ಹತ್ತು ಹಲವು ಕಾರಣಗಳಿಂದ ಹರಿದು ಹಂಚಿ ಹೋಗಿ ರೂಪುಗೊಂಡ ರಾಜ್ಯಗಳಲ್ಲಿ ಈ ಗುಮ್ಮಟ ನಗರಿ ವಿಜಯಪುರವು ಒಂದು. ವಿಜಾಪುರ ಎಂದರೆ ವಿಜಯದ ಪುರ ಎಂಬುದಾಗಿ ಇದು ಆದಿಲ್ ಷಾಹಿ ಆಡಳಿತ ರಾಜಧಾನಿಯಾಗಿತ್ತು.
ಮುಸ್ಲಿಂ ಅರಸರು ಹಲವು ಸ್ಮಾರಕಗಳನ್ನು ನಿರ್ಮಿಸಿದ್ದು ಆದಿಲ್ ಷಾನ ವಂಶಾಡಳಿತದಲ್ಲಿ ಬಿಜಾಪುರದಲ್ಲಿ ವಿಶೇಷ ಸ್ಮಾರಕಗಳು ನಿರ್ಮಾಣಗೊಂಡಿದ್ದವು. ಹಲವು ಮಸೀದಿ, ಸಮಾಧಿ, ಸೌಧಗಳು, ಅರಮನೆ ಕೋಟೆಗಳು ಈ ಭಾಗದಲ್ಲಿದ್ದು ಅಷ್ಟೊಂದು ಅಭಿವೃದ್ಧಿ ಹೊಂದಿರದ ಊರು ಇದು ಜನ ಸಾಮಾನ್ಯರ ಬದುಕುವ ಶೈಲಿಯು ಇಲ್ಲಿನ ಬಡತನವನ್ನು ಸಿರಿತನವನ್ನು ಬಿಂಬಿಸುತ್ತದೆ. ಆದರೆ ಪ್ರವಾಸಿಗರಿಗೆ ಅನುದಿನವು ಕೊರತೆ ಇಲ್ಲದ ಊರು ಇದು.
ದಕ್ಷಿಣದ ತಾಜ್ ಮಹಲ್ ಎಂದು ಪ್ರಖ್ಯಾತ ಪಡೆದ ಇಬ್ರಾಹಿಂ ರೋಜಾ ವಿಜಯಪುರ ಪಟ್ಟಣದ ಹೊರವಲಯದಲ್ಲಿರುವ ಸ್ಮಾರಕವನ್ನು ಎರಡನೇ ಇಬ್ಬಾಹಿಂ ಅದಿಲ್ ಶಾಹಿಯ ಆಜ್ಞೆಯಂತೆ ಮಲ್ಲಕ್ ಸಂದಲ್ ಎಂಬವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರಕ ಆಗ್ರದ ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿ ನೀಡಿದ್ದು ಎಂದು ಬ್ರಿಟಿಷ್ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದರೆಂದು ಇಲ್ಲಿನ ದಾಖಲೆಗಳಲ್ಲಿ ಇದೆ.ಇಸ್ಲಾಮಿಕ್ ವಾಸ್ತುಶಿಲ್ಪ ಹೊಂದಿದ ಕಟ್ಟಡಗಳಲ್ಲಿ ಇಬ್ಬಾಹಿಂ ರೋಜಾ ಅತಿ ಸುಂದರ ನಿರ್ಮಿತ, ಸೂಕ್ಷ್ಮ ನಿಲುವಿನ ಮಿನಾರ್ ಗಳು ಎಂಬ ಹೆಗ್ಗಳಿಕೆ ಇದೆ. ಕಪ್ಪು ಅಮೃತಶಿಲೆಗಳಲ್ಲಿ ನಿರ್ಮಾಣ ಗೊಂಡ ಈ ಸ್ಮಾರಕವನ್ನು ಕಪ್ಪುಕಲಾಸುಂದರಿ ಎಂದು ಕರೆಯುತ್ತಾರೆ. ಸ್ಮಾರಕದ ನಾಲ್ಕು ಬದಿಗಳಲ್ಲಿ ಕಲಾತ್ಮಕ ಕಿರಿದಾದ ಬಾಗಿಲುಗಳನ್ನು ನಿರ್ಮಿಸಲಾಗಿದ್ದು ಏಕ ಶಿಲೆಯಿಂದ ನಿರ್ಮಾಣಗೊಂಡಿರುವ ರೋಜಾ ಛಜ್ಜಾಗಳಿದ್ದು ಮಿನಾರ್ ಗಳನ್ನು ನಿರ್ಮಿಸಲಾಗಿದೆ. ಏಕ ಶಿಲೆಯಲ್ಲಿ ಕಮಲದ ಎಸಳುಗಳ ವಿನ್ಯಾಸವನ್ನು ಗುಮ್ಮಟದ ಸುತ್ತಾನಿರ್ಮಿಸಲಾಗಿದ್ದು ಈ ಕಪ್ಪು ಸುಂದರಿಯನ್ನು ಒಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕೆನಿಸುತ್ತದೆ.
ವಿಶಿಷ್ಟ ವಿನ್ಯಾಸ = ಕಪ್ಪು ತಾಜ್ ಇಬ್ರಾಹಿಮ್ ರೋಜಾ ಸೂಕ್ಷ್ಮ ಹಾಗೂ ಕಲಾತ್ಮಕ ಕುಸುರಿಯಿಂದ ಅಲಂಕೃತವಾದ ಮಸೀದಿ ಹಾಗೂ ಸ್ಮಾರಕಗಳ ಅವಳಿ ಕಟ್ಟಡ. ಧೃಡ ಗಾರೆಯಿಂದ ಕೂಡಿದ್ದು ಕರ ಕುಶಲ ಶಿಲ್ಪದ ಮಿನಾರ್ ಗಳಿಂದ ಆವೃತ್ತವಾದ ಕಟ್ಟಡದ ಶಿಲ್ಪ ಸೌಂದರ್ಯ ಹಾಗೂ ನಿರ್ಮಿಸಿದ ಮೇಲ್ಚಾವಣಿ ಸುಂದರವಾಗಿದೆ.ಕಲ್ಲಿನ ವೇದಿಕೆಯ ಮೇಲೆ ಕಟ್ಟಲಾಗಿರುವ ಈ ಕಟ್ಟಡದ ಗೋಡೆಗಳಲ್ಲಿ ಕುರಾನ್ ಶ್ಲೋಕಗಳನ್ನು ಬರೆಯಲಾಗಿದೆ. ರಾಜಪರಿವಾರ ವೈರಿಗಳಿಂದ ತಪ್ಪಿಸಿಕೊಳ್ಳಲು ಇಲ್ಲಿನ ಬಾಗಿಲುಗಳಲ್ಲಿ ನೆಲಮಾಳಿಗೆಯ ದಾರಿ ಇದೆ. ಆದರೆ ಈಗ ನೆಲ ಮಾಳಿಗೆಯ ನಕ್ಷೆ ಇದೆ ಹೊರತು ಸಾಗಿ ಹೋಗುವ ದಾರಿ ಹಾಳು ಬಿದ್ದಿದೆ. ಸುಂದರ ಸೂಕ್ಷ್ಮ ಕೆತ್ತನೆ ಗಾಳಿ ಬೆಳಕಿನ ಸಂಯೋಜನೆ ಅಭೂತಪೂರ್ವವಾಗಿದ್ದು. ಕೇವಲ ಕಪ್ಪು ಬಣ್ಣ ಹೊಂದಿದಕ್ಕೆ ತಾಜ್ ಮಹಲ್ ನಷ್ಟು ಪ್ರಖ್ಯಾತ ಹೊಂದಿಲ್ಲವೆನೊ ಎಂದೆ ನಿಸುತ್ತದೆ. ಇಲ್ಲಿಗೋರಿಗಳಿರುವ ಸ್ಮಾರಕ ಹಾಗೂ ಪ್ರಾರ್ಥನಾ ಮಸೀದಿಯ ನಡುವೆ ಸುಂದರ ಕಾರಂಜಿಯು ಇದೆ.
ಇತಿಹಾಸ = ಇಬ್ರಾಹಿಮ್ ರೋಜಾದ ಇತಿಹಾಸ ನಿಜವಾಗಿಯು ಅಚ್ಚರಿ ಮೂಡಿಸುತ್ತದೆ. ಎರಡನೇ ಇಬ್ರಾಹಿಮ್ ಆದಿಲ್ ಶಾಹಿ ತನ್ನ ಮಡದಿ ತಾಜ್ ಸುಲ್ತಾನಳಿಗೆ ಪ್ರೀತಿಯ ಕಾಣಿಕೆಯಾಗಿ ಸುಲ್ತಾನಳ ಚಿರನೆನಪಿಗಾಗಿ ಕಟ್ಟಿಸಿದನು ಆದರೆ ದುರಾದೃಷ್ಟವಶಾತ್ ಸ್ಮಾರಕ ಪೂರ್ಣಗೊಳಿಸುವ ಮೊದಲು ಅಂದರೆ ಸ್ಮಾರಕ ಅರ್ಧದಲ್ಲಿರುವಾಗಲೆ ಅರಸ ಕೊನೆಯುಸಿರೆಳೆಯುತ್ತಾನೆ ಗಂಡನಿಗೆ ತನ್ನ ಮೇಲಿದ್ದ ಅಪಾರಪ್ರೇಮದಿಂದ ಅರಸ ನಿರ್ಮಿಸುತ್ತಿದ್ದ ರೋಜಾ ನಿರ್ಮಾಣವನ್ನು ವಾಸ್ತು ಶಿಲ್ಪಿ ಮಲ್ಲಿಕ್ ಸಂದಲ್ ಮಾರ್ಗ ದರ್ಶನದಲ್ಲಿ ರಾಣುತಾಜ್ ಸುಲ್ತಾನಳೆ ಪೂರ್ಣಗೊಳಿಸುತ್ತಾಳೆ. ಆದಿಲ್ ಷಾನ ಸಮಾಧಿಯು ಇಲ್ಲೆ ಇದೆ. ತಾಜ್ ರೋಜಾ ಆಗಬೇಕಿದ್ದ ಸ್ಮಾರಕ ಇಬ್ಬಾಹಿಂ ರೋಜಾ ಆಯಿತು. ಇಬ್ರಾಹಿಮ್ ಆದಿಲ್ ಶಾಹಿ ಒಬ್ಬ ಸಂಗೀತ ಕಲಾವಿದನಾಗಿ ಉತ್ತಮ ಹಾಡುಗಾರನು ಹೌದು .ಸಂಗೀತ ಪರಿಕರಗಳನ್ನು ನುಡಿಸುತ್ತಿದ್ದು ಅನೇಕ ಹಾಡುಗಳನ್ನು ಕಟ್ಟಿದ ಕವಿಯು ಹೌದು ಕಿತಾಬ್ ಏ ನವರಸ್ ಎಂಬ ಕವನ ಸಂಕಲನದ ರಚನಾಕಾರನು ಹೌದು. ಜನಾನುರಾಗಿಯಾಗಿದ್ದ ಅರಸ ತನ್ನ ಆಸ್ಥಾನದಲ್ಲಿ ಅನೇಕ ವಿದ್ವಾಂಸರಿಗೆ ಆಶ್ರಯ ಕಲ್ಪಿಸಿದ್ದ.
ಇಬ್ರಾಹಿಂ ರೋಜಾ ತನ್ನ ಕಲಾತ್ಮಕ ಕೆತ್ತನೆಯಿಂದ ಪ್ರವಾಸಿಗರ ಮನಸೆಳೆಯುತ್ತಿದೆ. ಇದು ದಂಪತಿಗಳಿಬ್ಬರ ಗೋರಿ. ಇಲ್ಲಿನ ಗೈಡ್ ಗಳು ಹೇಳುವಂತೆ ಅಚ್ಚರಿ, ಸುಂದರತೆ ಹೊಂದಿದ್ದರು ಇದು ಖ್ಯಾತಿಯನ್ನು ಹೊಂದುವುದರಲ್ಲಿ ಬಹು ಹಿಂದಿರುವುದಕ್ಕೆ ಖೇದ ವ್ಯಕ್ತ ಪಡಿಸುತ್ತಾರೆ. ಬೆಳಿಗ್ಗೆ 6 ರಿಂದ ಸಂಜೆ 6 ರ ತನಕ ಇಲ್ಲಿ ಪ್ರವೇಶ ದೊರೆಯುತ್ತದೆ. ವಿಜಯಪುರಕ್ಕೆ ರೈಲು, ಹಾಗೂ ಬಸ್ ಮೂಲಕ ತಲುಪ ಬಹುದು ಇತರ ನಗರಗಳಿಂದ ಉತ್ತಮ ಸಂಪರ್ಕ ಇದೆ.